Tuesday 12 April 2011

ಕೇವಲ ನೆನಪಿಗಾಗಿ..

ಇದು ಪುಟ್ಟ ಕವನ... ಅದರೊಳಗೇ  ಬಚ್ಚಿಟ್ಟುಕೊಂಡಿದೆ.. ತನ್ನ ಮೌನ ಆಕ್ರಂದನ... ನಾಲ್ಕೇ ಸಾಲುಗಳ ಅಪಕ್ವ ವೆನಿಸುವ ನುಡಿಗಳು.. ಆದರೂ.. ತನ್ನೊಳಗೆ..ಅಡಗಿಸಿದ ಯಾರೂ ಅರ್ಥೈಸದ ... ಯಾರಿಗೂ ಬೇಡದ ಸಾವಿರಾರು..  ಪರಿಪಕ್ವ ವಿಚಾರಗಳ..ಕೋಟ್ಯಾಂತರ ನಿಟ್ಟುಸಿರುಗಳ ಒಳಗೊಂಡ ಪುಟ್ಟ ಕವನ.. ಜೊತೆಗೆ ತನ್ನ ಮೌನ ಆಕ್ರಂದನ.. ತುಟಿಯಾಚೆ ಬಾರದೆ... ಮನದೊಳಗೆ ಕೂರದೆ...ಸದ್ದೇ ಮಾಡದಂತೆ  ಇದ್ದೂ ಇಲ್ಲದಂತೆ... ಇಲ್ಲದೆಯೂ ಇರುವಂತೆ... ತನ್ನ ಅಸ್ತಿತ್ವವನ್ನೇ.. ಪ್ರಶ್ನಿಸಿಕೊಳ್ಳುವ ಕವನ..!ಅಗೋಚರ ಪದಗಳ.. ಅಚ್ಚರಿಯ ಅರ್ಥಗಳ.. ಒಮ್ಮೆಲೇ.. ಒಳಗೊಂಡ ಪುಟ್ಟ ಕವನ.. ಜೊತೆಗೆ ತನ್ನ ಮೌನ ಆಕ್ರಂದನ....
ಮನವೇ ಪ್ರಕೃತಿ.. ಆಗಸವೇ ನಿರೀಕ್ಷೆ... ಭಾವವೇ ಸಾಗರ ಕನಸಿನ ತೀರದಲ್ಲೇ ಆಸೆಗಳ ಮರಳ ಗೂಡು... ಕಲ್ಪನೆಗಳೇ ಆಗಾಗ ಮೂಡುವ ಅಲೆಗಳಂತೆ.... ಎಲ್ಲವೂ ಸರಿ ಇದ್ದರೆ... ಮನದ ಪ್ರಕೃತಿ ನಗುತಲೇ ಇದ್ದರೆ... ಆಸೆಗಳ ಮರಳ ಗೂಡು ಹಾಗೇ ಉಳಿಯಬಹುದು ಎಂದಿಗೂ ಅಳಿಯದ  ನೆನಪಿನ ಕೃತಿಯಾಗಿ... ಅಕಸ್ಮಾತ್... ಮನದ ಪ್ರಕೃತಿ ಮುನಿದು.... ಭಾವಗಳ ಸಾಗರ ಹುಚ್ಚಾಗಿ ಕುಣಿದು...ಕಲ್ಪನೆಗಳ ಸುನಾಮಿ ಅಲೆಗಳು..ಭೋರ್ಗರೆದು ಅಪ್ಪಳಿಸಿದರೆ... ಆಸೆಗಳ ಮರಳ ಗೂಡು ಕೊಚ್ಚಿ ಹೋಗಬಹುದು... ಅಳಿದು ಹೋಗಿ ಕಾಡಬಹುದು.. ಕೇವಲ ನೆನಪಾಗಿ... ! ಕೊನೆಗೆ .... ಉಳಿಯುವುದು... ಆಗಸವೆಂಬ ನಿರೀಕ್ಷೆ ಮಾತ್ರ... ಆಗಸ ಎಂದಿಗೂ ಅಳಿಯದ ಅಚ್ಚರಿ... ಮತ್ತೆ ಮರಳ ಗೂಡು ಕಟ್ಟಬೇಕೆ... ? ಪ್ರಕೃತಿ ಸಿದ್ಧಳಾಗುವ ವರೆಗೂ ಕಾಯಬೇಕು ... ಅಲ್ಲಿಯವರೆಗೂ... ನಿರೀಕ್ಷೆಯ ಆಗಸವನ್ನೇ ನೋಡಬೇಕು.. ಕೇವಲ ನೆನಪಿಗಾಗಿ..

No comments:

Post a Comment